ರೇಣುಕಾಸ್ವಾಮಿ ಮೇಲೆ ಲಾಠಿಯಿಂದ ಹಲ್ಲೆ; ಇನ್‌ಸ್ಟಾಗ್ರಾಮ್ ನಲ್ಲಿ ಪವಿತ್ರಾಗೌಡಗೆ 200 ಅಶ್ಲೀಲ ಮೆಸೇಜ್; ತನಿಖೆ ವೇಳೆ ಬಹಿರಂಗ ನಟ ದರ್ಶನ್ ಅವರ ಆರ್‌ಆರ್‌ನಗರ ನಿವಾಸದ ಭದ್ರತಾ ಕೊಠಡಿಯಲ್ಲಿದ್ದ ಲಾಠಿಯಿಂದ ರೇಣುಕಾಸ್ವಾಮಿಗೆ ಥಳಿಸಲಾಗಿದೆ. ಬೆಂಗಳೂರು: ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಹಲ್ಲೆ ಮಾಡಿದ್ದು ಪೊಲೀಸ್‌ ಲಾಠಿಯಿಂದ ಎಂದು ತಿಳಿದುಬಂದಿದೆ. ಆ ಲಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಠಿ ಸಿಕ್ಕಿದ್ದು ಹೇಗೆ ಅನ್ನೋದೇ ಇಂಟರೆಸ್ಟಿಂಗ್ ಸ್ಟೋರಿಯಾಗಿದೆ.ದರ್ಶನ್ ಬರ್ತಡೇ ದಿನ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರು, ಮನೆಯ ಬಳಿ ಒಂದು ಲಾಠಿ ಬಿಟ್ಟು ಹೋಗಿದ್ದರಂತೆ. ಮನೆಯ ಸೆಕ್ಯೂರಿಟಿ ಗಾರ್ಡ್ ರೂಂನಲ್ಲಿ ಲಾಠಿಯನ್ನು ಮನೆಯವರು ಎತ್ತಿಟ್ಟಿದ್ದರಂತೆ. ನಟ ದರ್ಶನ್ ಅವರ ಆರ್‌ಆರ್‌ನಗರ ನಿವಾಸದ ಭದ್ರತಾ ಕೊಠಡಿಯಲ್ಲಿದ್ದ ಲಾಠಿಯಿಂದ ರೇಣುಕಾಸ್ವಾಮಿಗೆ ಥಳಿಸಲಾಗಿದೆ.ಮನೆಯಲ್ಲಿದ್ದ ಲಾಠಿಯನ್ನ ವ್ಯಕ್ತಿಯೊಬ್ಬನಿಂದ ಶೆಡ್‌ಗೆ ನಟ ದರ್ಶನ್‌ ತರಿಸಿಕೊಂಡಿದ್ದರಂತೆ. ಅದೇ ಲಾಠಿ ಬಳಕೆ ಮಾಡಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆ ವೇಳೆ ಪೀಸ್ ಪೀಸ್ ಆಗಿದ್ದ ಲಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ, ಪಟ್ಟಣಗೆರೆ ಶೆಡ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳಿಗೆ, ದರ್ಶನ್ ಸುಮಾರು 50 ನಿಮಿಷಗಳ ಕಾಲ ಶೆಡ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಜೂನ್ 8 ರಂದು, ದರ್ಶನ್ ತನ್ನ ಸ್ನೇಹಿತ ಹಾಗೂ ನಗರದ ಸ್ಟೋನಿ ಬ್ರೂಕ್ ಪಬ್ ಮಾಲೀಕ ವಿನಯ್ ಜೊತೆಗೆ ಸಂಜೆ 4.30 ಕ್ಕೆ ಶೆಡ್‌ಗೆ ಪ್ರವೇಶಿಸಿದ್ದಾರೆ, ನಂತರ ಅವರು ಸಂಜೆ 5.20 ರ ಸುಮಾರಿಗೆ ಶೆಡ್‌ನಿಂದ ಹೊರಟಿದ್ದಾರೆ. ಕೊಲೆ ನಡೆದ ಶೆಡ್ ವಿನಯ್ ಅವರ ಚಿಕ್ಕಪ್ಪ ಪಟ್ಟಣಗೆರೆ ಜಯಣ್ಣ ಅವರ ಒಡೆತನದಲ್ಲಿದೆ.ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಕಳುಹಿಸಿದ್ದ ಸಂದೇಶಗಳನ್ನು ಓದುವಂತೆ ನಟ ತನ್ನ ಸಹಚರ ಪವನ್‌ಗೆ ಹೇಳಿದ್ದ ಎನ್ನಲಾಗಿದೆ. ಪವನ್ ಸಂದೇಶಗಳನ್ನು ಜೋರಾಗಿ ಓದುತ್ತಿದ್ದಾಗ, ನಟ ಸಂತ್ರಸ್ತೆನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ದರ್ಶನ್ ಅವರು ಶೆಡ್‌ನಲ್ಲಿ ಕೇವಲ ಎರಡು ನಿಮಿಷಗಳ ಕಾಲ ಇದ್ದೆ ಎಂದು ಪೊಲೀಸರಿಗೆ ತಿಳಿಸಿದ್ದರು ಮತ್ತು ರೇಣುಕಾಸ್ವಾಮಿಗೆ ಹಣ ನೀಡಿ, ತಮ್ಮ ಊರಿಗೆ ಹಿಂತಿರುಗುವಂತೆ ಮತ್ತು ಪವಿತ್ರಾಗೆ ಸಂದೇಶ ಕಳುಹಿಸಬೇಡಿ ಎಂದು ಕೇಳಿದ್ದಾಗಿ ತಿಳಿಸಿದ್ದರು. ನಕಲಿ ಇನ್‌ಸ್ಟಾಗ್ರಾಮ್ ಐಡಿ ಬಳಸಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಸುಮಾರು 200 ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.ಆಕೆ ಸಂದೇಶಗಳಿಗೆ ಪ್ರತಿಕ್ರಿಯಿಸದಿದ್ದಾಗ, ಅವನು ತನ್ನ ಖಾಸಗಿ ಭಾಗದ ಚಿತ್ರವನ್ನು ಕಳುಹಿಸಿದನು. ಇದರಿಂದ ಹತಾಶಳಾದ ಆಕೆ ಪವನ್‌ಗೆ ಸಂದೇಶಗಳನ್ನು ತೋರಿಸಿದಳು, ನಂತರ ಪವನ್ ತನ್ನ ಫೋನ್ ತೆಗೆದುಕೊಂಡು ಸಂತ್ರಸ್ತೆಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದ. ರೇಣುಕಾಸ್ವಾಮಿಯನ್ನು ಬಲೆಗೆ ಬೀಳಿಸುವಲ್ಲಿ ಪವನ್ ಸಫಲನಾಗಿದ್ದ.ಸದ್ಯ ತುಮಕೂರು ಜೈಲಿನಲ್ಲಿರುವ ಬನ್ನೇರುಘಟ್ಟ ಮುಖ್ಯರಸ್ತೆಯ ಕೆಂಬತ್ತಳ್ಳಿ ನಿವಾಸಿ, ಆರೋಪಿ ಸಂಖ್ಯೆ 17 ಎಲ್ ನಿಖಿಲ್ ನಾಯಕ್ (21) ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನಿಖಿಲ್ ಪರ ವಕೀಲರು ನಗರದ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶವವನ್ನು ಶೆಡ್‌ನಿಂದ ಸ್ಥಳಾಂತರಿಸಿ ಸುಮನಹಳ್ಳಿ ಮಳೆನೀರು ಚರಂಡಿಗೆ ವಿಲೇವಾರಿ ಮಾಡಿದ ಆರೋಪಿಗಳಲ್ಲಿ ನಿಖಿಲ್ ಒಬ್ಬನಾಗಿದ್ದಾನೆ. ನಂತರ ಜೂ.10ರಂದು ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ಮೂವರ ಜತೆ ಶರಣಾಗಿದ್ದ ಆತ, ಕೊಲೆಯ ಹೊಣೆ ಹೊತ್ತುಕೊಂಡಿದ್ದ.